“ಕಾಡುಪ್ರಾಣಿ ಹತ್ಯೆ ” ಅರಣ್ಯ ಇಲಾಖೆ ಅಧಿಕಾರಿಗಳ ದಾಳಿ

Share


ಭಟ್ಕಳ: ಕಾಡುಪ್ರಾಣಿ ಹತ್ಯೆ ಶಂಕೆಯ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಭಟ್ಕಳದ ಹುರುಳಿಸಾಲದ ಮನೆ ಒಂದರ ಮೇಲೆ ದಾಳಿ ನಡೆಸಿ 21 ಕೆಜಿ ಮಾಂಸ, ಜಿಂಕೆ ಕೊಬ್ಬು ಹಾಗೂ ಎರಡು ಏರ್‌ಗನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಜಾಫರ್ ಬ್ರಹ್ಮವರ್ ಎಂಬಾತ ಕಾಡಿನಲ್ಲಿ ಪ್ರಾಣಿಯನ್ನು ಹತ್ಯೆ ಮಾಡಿ, ಮಾಂಸವನ್ನು ಮನೆಯ ಪಕ್ಕದಲ್ಲೇ ಬೇರ್ಪಡಿಸಿ ಉಳಿದ ಅವಶೇಷಗಳನ್ನು ಮನೆಯ ಪಕ್ಕದಲ್ಲಿ ಇದ್ದ ಪಾಳುಬಿದ್ದ ಬಾವಿಗೆ ಎಸೆದಿರುವುದಾಗಿ ಆರೋಪಿಸಲಾಗಿದೆ. ದಾಳಿ ವೇಳೆ ಅಧಿಕಾರಿಗಳು ಬಾವಿಯಲ್ಲಿದ್ದ ಅವಶೇಷಗಳನ್ನು ಹೊರತೆಗೆದು ಪರಿಶೀಲಿಸಿದರು.


ಮನೆ ಒಳಗೆ ಶೋಧಕ್ಕೆ ಮುಂದಾದಾಗ ಆರಂಭದಲ್ಲಿ ಮನೆಯವರು ಬಾಗಿಲು ತೆರೆದು ಸಹಕರಿಸದೆ ವಿರೋಧ ವ್ಯಕ್ತಪಡಿಸಿದ ಘಟನೆ ನಡೆಯಿತು. ಸುಮಾರು ಆರು ಗಂಟೆಗಳ ಕಾಲ ಅಧಿಕಾರಿಗಳು ಕಾದ ಬಳಿಕ ಬಾಗಿಲು ತೆರೆಯಲಾಯಿತು. ನಂತರ ನಡೆದ ಪರಿಶೀಲನೆಯಲ್ಲಿ ಫ್ರಿಡ್ಜ್‌ನಲ್ಲಿ ಸಂಗ್ರಹಿಸಿದ್ದ 21 ಕೆಜಿ ಮಾಂಸ ಪತ್ತೆಯಾಯಿತು. ಜೊತೆಗೆ ಜಿಂಕೆ ಕೊಬ್ಬು ಹಾಗೂ ಎರಡು ಏರ್‌ಗನ್‌ಗಳನ್ನು ವಶಪಡಿಸಿಕೊಳ್ಳಲಾಯಿತು.


ಈ ಕುರಿತು ಆರ್‌ಎಫ್‌ಒ ವಿಶ್ವನಾಥ ಪ್ರತಿಕ್ರಿಯಿಸಿ, “ಮೇಲ್ನೋಟಕ್ಕೆ ಕಾಡುಕೋಣದ ಮಾಂಸವಾಗಿರುವ ಶಂಕೆ ಇದೆ. ಮಾಂಸದ ನಮೂನೆಯನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ಬಳಿಕ ಖಚಿತಪಡಿಸಲಾಗುತ್ತದೆ” ಎಂದು ತಿಳಿಸಿದ್ದಾರೆ.


ಆರೋಪಿ ತಲೆಮರೆಸಿಕೊಂಡಿದ್ದು, ಬಂಧನಕ್ಕಾಗಿ ಅಧಿಕಾರಿಗಳು ಶೋಧ ಕಾರ್ಯ ಮುಂದುವರೆಸಿದ್ದಾರೆ.

ಕಾರ್ಯಾಚರಣೆಯಲ್ಲಿ ನಗರ ಠಾಣೆ ಸಿಪಿಐ ದಿವಾಕರ ಪಿ.ಎಂ. ಪಿಎಸ್ಐ ನವೀನ ನಾಯ್ಕ, ಗ್ರಾಮೀಣ ಠಾಣೆ ಪಿಎಸ್ಐ ಮಲ್ಲಿಕಾರ್ಜುನ, ಡಿಆರ್‌ಒಎಫ್‌ಗಳಾದ ಮಾರುತಿ, ಸಂದೀಪ್ ಸೇರಿದಂತೆ ಧನಂಜಯ ಮೊಗೇರ ಮತ್ತಿತರರು ಪಾಲ್ಗೊಂಡಿದ್ದರು.


ವರದಿ: ಉಲ್ಲಾಸ್ ಶಾನಭಾಗ ಶಿರಾಲಿ.

Leave a Reply

Your email address will not be published. Required fields are marked *

error: Content is protected !!