
ಸೆಪ್ಟೆಂಬರ್ -6 ಶನಿವಾರ ಶ್ರೀ ಚಿತ್ರಾಪುರ ಮಠದ ಪೂಜ್ಯ ಗುರುಗಳಾದ ಶ್ರೀ ಶ್ರೀ ಶ್ರೀ ಸದ್ಯೋಜಾತ ಶಂಕರಾ ಆಶ್ರಮ ಸ್ವಾಮೀಜಿಯವರ 29ನೇ ಚಾತುರ್ಮಾಸ ವ್ರತದ ಸೀಮೋಲಂಘನ ಕಾರ್ಯಕ್ರಮ.
ಇದೇ ಬರುವ ಶನಿವಾರ, ದಿನಾಂಕ6-09-25 ರಂದು ಶ್ರೀ ಚಿತ್ರಾಪುರ ಮಠದ ಗುರುಗಳಾದ ಶ್ರೀ ಶ್ರೀ ಸದ್ಯೋಜಾತ ಶಂಕರಾ ಆಶ್ರಮ ಸ್ವಾಮೀಜಿಯವರ 29 ನೇ ಚಾತುರ್ಮಾಸ ವ್ರತದ ಸೀಮೋಲಂಘನ ಕಾರ್ಯಕ್ರಮ ಬೆಳಿಗ್ಗೆ 9.30 ಗಂಟೆಗೆ ಪ್ರಾರಂಭವಾಗಲಿದೆ. ಅಂದು ಅನಂತ ಚತುರ್ದಶಿ ವ್ರತದ ಪ್ರಯುಕ್ತ ಕಲಸ ಸ್ಥಾಪನೆ ಮತ್ತು ಪೂಜೆ ಶ್ರೀಗಳವರ ಅಮೃತ ಹಸ್ತ ದಿಂದ ನೆರವೇರಲಿದೆ. ನಂತರ ಕ್ಷಮೆಯಾಚನೆ, ಶ್ರೀಮಠದ ಆಡಳಿತ ಮಂಡಳಿಯ ಪರವಾಗಿ ಅಧ್ಯಕ್ಷೀಯ ಭಾಷಣ, ಶ್ರೀಗಳಿಂದ ಭಕ್ತಾದಿಗಳಿಗಾಗಿ ಆಶೀರ್ವಚನ, ಪಾದಪೂಜೆ, ತೀರ್ಥ ಪ್ರಸಾದ ವಿತರಣೆ ಮತ್ತು ಮಹಾ ಅನ್ನ ಸಂತರ್ಪಣೆ ನೆರವೇರಲಿದೆ.
ಸಾಯಂಕಾಲ 4:00 ಗಂಟೆಗೆ ಅಳ್ವೆ ಕೋಡಿ ಶ್ರೀ ದುರ್ಗಾಪರಮೇಶ್ವರಿ ಸಮುದಾಯ ಭವನದಲ್ಲಿ ಚಾತುರ್ಮಾಸ ವ್ರತದ ಗುರು ಪೂಜೆ ನಂತರ ನದಿಯಲ್ಲಿ ಗಂಗಾ ಪೂಜೆ ನೆರವೇರಿಸಿ ಅಲ್ಲಿಂದ ಬೋಟಿನ ಮೂಲಕ ಹೆಬಳೆ ದೇವರ ದರ್ಶನ ಪಡೆದು ಪುನಃ ಬಂದು ಅಳವೆ ಕೋಡಿ ಶ್ರೀ ದುರ್ಗಾಪರಮೇಶ್ವರಿ ದೇವಿಯ ದರ್ಶನ ಮಾಡಲಿದ್ದಾರೆ.
ನಂತರ ಶಿರಾಲಿಯ ಶ್ರೀ ಮಹಾ ಗಣಪತಿ ಮಹಮ್ಮಾಯಿ ದೇವರ ದರ್ಶನ ಪಡೆದು, ಅಲ್ಲಿಯ ಆಡಳಿತ ಮಂಡಳಿಯವರಿಂದ ಪಾದುಕಾ ಪೂಜೆ ಸ್ವೀಕರಿಸಿ, ಶ್ರೀಗಳು ಆಶೀರ್ವಚನ ನೀಡಲಿದ್ದು ನಂತರ ಬೃಹತ್ ಶೋಭಾ ಯಾತ್ರೆಯ ಮೆರವಣಿಗೆಯ ಮೂಲಕ ಟ್ಯಾಬ್ಲೊ, ಡೊಳ್ಳು ಕುಣಿತದೊಂದಿಗೆ ಚಿತ್ರಾಪುರ ಮಠಕ್ಕೆ ಪುರ ಪ್ರವೇಶ ಮಾಡಲಿದ್ದಾರೆ.
ವರದಿ: ಉಲ್ಲಾಸ್ ಶಾನಭಾಗ್ ಶಿರಾಲಿ.