ಭಟ್ಕಳ: ತಾಲೂಕಿನ ಹರಿಜನಕೇರಿಯ ಅಂಜುಮಾನ್ ಕಾಲೇಜ್ ರೋಡ್ನಲ್ಲಿರುವ ಶ್ರೀ ಗಂಜಿಮಾರಿಯಮ್ಮ ಸಪರಿವಾರ ದೇವಸ್ಥಾನದಲ್ಲಿ ಫೆಬ್ರವರಿ 20ರಿಂದ ಆರಂಭವಾದ ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ಶುಕ್ರವಾರ ಉತ್ಸವವು ಶೋಭಾಯಾತ್ರೆಯೊಂದಿಗೆ ವಿಜೃಂಭಣೆಯಿಂದ ನೆರವೇರಿತು.

ದೇವರ ಬೆಳ್ಳಿ ಕವಚ ಮೆರವಣಿಗೆ ಶ್ರೀ ನಾಗಯಕ್ಷೆ ದೇವಸ್ಥಾನದಿಂದ ಆರಂಭವಾಗಿ ಹಳೆ ಬಸ್ ನಿಲ್ದಾಣ, ಸಂಸುದ್ದೀನ್ ಸರ್ಕಲ್ ಹಾಗೂ ತಾಲೂಕು ಆಡಳಿತ ಸೌಧಾ ಮಾರ್ಗವಾಗಿ ಗಂಜಿಮಾರಿಯಮ್ಮ ದೇವಸ್ಥಾನಕ್ಕೆ ತಲುಪಿತು.

ಮೆರವಣಿಗೆಯಲ್ಲಿ ವಿವಿಧ ಟ್ಯಾಬ್ಲೋಗಳು, ಮಹಿಳೆಯರ ಭಜನೆ–ನೃತ್ಯ, ಚಂಡೆ ವಾದ್ಯಗಳ ಘೋಷ ಹಾಗೂ ನೂರಾರು ಭಕ್ತರ ಉಪಸ್ಥಿತಿ ಉತ್ಸವಕ್ಕೆ ಮತ್ತಷ್ಟು ಮೆರುಗು ನೀಡಿತು.
ಫೆಬ್ರವರಿ 21ರಂದು ಬೆಳಿಗ್ಗೆ 9 ಗಂಟೆಗೆ ಸ್ವಸ್ತಿ ವಾಚನೆ, 25 ಕಲಶ ಅಧಿವಾಸ ಹೋಮ, ಅಭಿಷೇಕ, ಲಲಿತಾ ಸಹಸ್ರನಾಮಾರ್ಚನೆ, ಮಹಾಪೂಜೆ ಹಾಗೂ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದ್ದು, ಸಂಜೆ 7 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ದೇವಸ್ಥಾನ ಸಮಿತಿ ತಿಳಿಸಿದೆ.

ಉತ್ಸವದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತೀರ್ಥ–ಪ್ರಸಾದ ಸ್ವೀಕರಿಸಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ಸಮಿತಿ ಅಧ್ಯಕ್ಷ ಮೂರ್ತಿ ಆದಿ ಕರ್ನಾಟಕ ಮನವಿ ಮಾಡಿದ್ದಾರೆ.
ವರದಿ: ಉಲ್ಲಾಸ್ ಶಾನಭಾಗ ಶಿರಾಲಿ.
