ಕಲಾಸಿರಿ ಪ್ರಶಸ್ತಿಯು ಬದುಕಿನ ಸಾರ್ಥಕತೆಯ ಜ್ಞಾನದ ಬೆಳಕು ಬೆಳಗಲು ಸಾಧ್ಯ. :ಪಿ. ಆರ್. ನಾಯ್ಕ

Share

ಭಟ್ಕಳ : ಒಂದು ಹಣತೆಯಿಂದ ಹಲವು ಹಣತೆಗಳು ಬೆಳಗುವಂತೆ, ಕಲಾಸಿರಿಯು ಬದುಕಿನ ಸಾರ್ಥಕತೆಯ ಜ್ಞಾನದ ಬೆಳಕು ಇತರರ ಬದುಕಿನಲ್ಲೂ ಸದಾ ಬೆಳಗಲು ಸಾಧ್ಯ ಎಂದು ಕಲಾಸಿರಿ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಪಿ. ಆರ್. ನಾಯ್ಕ ಹೇಳಿದರು.

ಇತ್ತೀಚೆಗೆ ಶಿರಾಲಿ, ಚಿತ್ರಾಪುರದ ಸಾಹಿತಿ ಶ್ರೀಧರ್ ಶೇಟ್ ರವರ ಮನೆ ‘ಕಲಾಸಿರಿ’ಯಲ್ಲಿ ಜಿಲ್ಲಾ ಮತ್ತು ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕಲಾಸಿರಿ ಪ್ರತಿಷ್ಠಾನದಿಂದ ನಡೆದ ‘ಕಲಾಸಿರಿ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಕಲಾಸಿರಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. ಓರ್ವ ಶಿಕ್ಷಕ ದಂಪತಿಗಳು ಇನ್ನೊಂದು ಶಿಕ್ಷಕನಿಗೆ ಕಲಾಸಿರಿ ಪ್ರಶಸ್ತಿ ನೀಡಿ ಗೌರವಿಸಿರುವುದು ಅವರ ವಿಶಾಲ ಹೃದಯವಂತಿಕೆಗೆ ಸಾಕ್ಷಿ ಎಂದರು. ಸತ್ಯಕ್ಕೆ ವಿವಾದದ ಅಗತ್ಯವಿಲ್ಲ. ಅದು ಸ್ವಯಂಪ್ರಕಾಶನ. ಕಲಾಸಿರಿ ಶ್ರೀಧರ್ ಶೇಟ್ ರವರ ಸ್ವಯಂ ಪ್ರೇರಿತ ಸಂಘಟನಾ ಶಕ್ತಿಯ ಪ್ರತೀಕದಂತೆ. ಇಂತಹ ನಿರ್ಮಲ ಜ್ಯೋತಿ ನಾಡಿನ ತುಂಬೆಲ್ಲ ಪಸರಿಸಲಿ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಸಾಹಿತಿ ಶಂಭು ಹೆಗಡೆ ಮಾತನಾಡಿ, ಮನೆಯಂಗಳದಲ್ಲರಳಿದ ಕಲಾಸಿರಿ ನಾಡಿನ ತುಂಬೆಲ್ಲ ತನ್ನ ಛಾಪು ಮೂಡಿಸಲಿ. ಶ್ರೀಧರ್ ಶೇಟ್ ರವರ ಮನಸ್ಸು ಮತ್ತು ಮನೆ ಸಾಹಿತ್ಯಕ್ಕೆ ನೆಲೆಯಾಗಿದೆ. ಓರ್ವ ಶಿಕ್ಷಕನಾದವನು ಇನ್ನೊಬ್ಬ ಶಿಕ್ಷಕನನ್ನು ಗುರುತಿಸಿ, ಗೌರವಿಸಿರುವುದು ಸಮಾಜಕ್ಕೆ ಮಾದರಿಯಾದದ್ದು ಎಂದರು. ಚುಟುಕು ಕವನ ವಾಚಿಸಿ ಇಡೀ ಕಾರ್ಯಕ್ರಮಕ್ಕೆ ಮೆರಗು ತಂದರು.

ಪರಿಷತ್ತಿನ ಅಧ್ಯಕ್ಷ ಗಂಗಾಧರ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಹಿತ್ಯ ಪರಿಷತ್ತು ಜನಸಾಮಾನ್ಯರ ಪರಿಷತ್ತಾಗುವಲ್ಲಿ ಇಂತಹ ಯಶಸ್ವಿ ಕಾರ್ಯಕ್ರಮಗಳೇ ಸಾಕ್ಷಿ. ಪ್ರತಿ ಓದುಗರ ಮನೆಯಲ್ಲೂ ಸಾಹಿತ್ಯದ ಕಾರ್ಯಕ್ರಮವಾದಾಗ ಅವರ ಕುಟುಂಬದಲ್ಲಿ ನಿಜವಾದ ಕಲಾಸಿರಿ ಅರಳಲು ಸಾಧ್ಯ. ಶ್ರೀಧರ್ ಶೇಟ್ ರವರು ಸಾಹಿತಿಯಾಗಿ, ಸಂಘಟಕರಾಗಿ ಸಾಹಿತ್ಯ ಪರಿಷತ್ತಿನ ಸಂಗಾತಿಯಾಗಿ ದುಡಿದಿರುವುದು ಅವರ ಕಲಾಸಿರಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದರು.

ಸಾಹಿತಿ ನಾರಾಯಣ ಯಾಜಿ ಶಿರಾಲಿ ಮಾತನಾಡಿ ಮನೆಯಲ್ಲಿ ಸಾಹಿತ್ಯದ ಕಾರ್ಯಕ್ರಮಗಳನ್ನು ಸಂಘಟಿಸುವುದು ಸುಲಭದ ಕೆಲಸವಲ್ಲ. ಅದನ್ನು ಶ್ರೀಧರ್ ಶೇಟ್ ದಂಪತಿಗಳು ಮಾಡಿ ತೋರಿಸಿದ್ದಾರೆ ಎಂದು ಶ್ಲಾಘಿಸಿ, ಕವನವಾಚನ ಮಾಡಿದರು.
ಸರಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಎನ್. ನಾಯ್ಕ ಸನ್ಮಾನ ಸ್ವೀಕರಿಸಿ ಸಂದರ್ಭೋಚಿತವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಪ್ರಾಥಮಿಕ ಶಿಕ್ಷಕ ಸಂಘದ ಅಧ್ಯಕ್ಷ ಉಲ್ಲಾಸ ನಾಯ್ಕ, ನೌಕರರ ಸಂಘದ ಕಾರ್ಯದರ್ಶಿ ವೆಂಕಟೇಶ ನಾಯ್ಕ, ರಾಜ್ಯ ಪರಿಷತ್ ಸದಸ್ಯ ಕುಮಾರ ನಾಯ್ಕ, ಶಿಕ್ಷಕ ಸಂಘದ ಕಾರ್ಯದರ್ಶಿಎಮ್.ಡಿ.ರಫೀಕ್, ನೌಕರರ ಸಂಘದ ಲೆಕ್ಕಪತ್ರ ಪರಿಶೋಧಕ ಯು. ಎ. ಲೋಹಾನಿ, ಶಿಕ್ಷಕರಾದ ವಿಲ್ಸನ್ ರೋಡ್ರಿಗಸ್, ಉಮೇಶ್ ಕೆರೆಕಟ್ಟೆ,ದೇವರಾಜ ದೇವಾಡಿಗರನ್ನು ಕಲಾಸಿರಿ ಪ್ರತಿಷ್ಠಾನದ ಪರವಾಗಿ ಸನ್ಮಾನಿಸಲಾಯಿತು.ಸಾಹಿತಿ ಶ್ರೀಧರ್ ಶೇಟ್ ಉಪಸ್ಥಿತರಿದ್ದರು.

ಕನ್ನಡ ಕಾರ್ತಿಕ ರಾಜ್ಯೋತ್ಸವದ ಅಂಗವಾಗಿ ನಡೆದ ಕವಿಗೋಷ್ಠಿಯಲ್ಲಿ ಮಂಜುನಾಥ ನಾಯ್ಕ ಯಲ್ವಡಿಕವೂರ್, ಸುರೇಶ ಮುರುಡೇಶ್ವರ್, ಎಚ್.ಎನ್. ನಾಯ್ಕ, ಹೇಮಲತಾ ಶ್ರೀಧರ್, ಕೆ.ಎಲ್. ಶಾನಭಾಗ, ಶಂಕರ ನಾಯ್ಕ, ಸುಧಾ ಭಟ್, ಪ್ರಸಾದ ಶಾನಭಾಗ, ಭಾರತಿ ಹೆಗಡೆ ಕವನ ವಾಚಿಸಿದರು.

ಇದೇ ಸಂದರ್ಭದಲ್ಲಿ ಸಾಧಕರ ಮನೆಗೆ ಸಾಹಿತ್ಯ ಪರಿಷತ್ತು ಕಾರ್ಯಕ್ರಮದಡಿ ಪ್ರಸಕ್ತ ಸಾಲಿನ ‘ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ’ ಪುರಸ್ಕೃತ ಶ್ರೀಧರ್ ಶೇಟ್ ಮತ್ತು ಪಿ. ಆರ್. ನಾಯ್ಕರನ್ನು ಹಾಗೂ ಎಜು ಇನ್ಸ್ಪಾಯರ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತೆ ರಾಜಂ ನಾಯಕ ಹಿಚ್ಕಡರನ್ನು ಸನ್ಮಾನಿಸಿ ಗೌರವಿಸಲಾಯಿತು.

ಪ್ರಾರಂಭದಲ್ಲಿ ‘ಕಲಾಸಿರಿ ಪ್ರತಿಷ್ಠಾನ’ದ ಅಧ್ಯಕ್ಷ ಶ್ರೀಧರ್ ಶೇಟ್ ಸ್ವಾಗತಿಸಿದರೆ, ಸಾಹಿತ್ಯ ಪರಿಷತ್ತಿನ ಸಂತೋಷ ಆಚಾರ್ಯ ವಂದಿಸಿದರು. ಕಲಾಸಿರಿ ಪ್ರತಿಷ್ಠಾನದ ಕಾರ್ಯದರ್ಶಿ ಹೇಮಲತಾ ಶೇಟ್ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಶ್ರೀಶಾ ಶ್ರೀಧರ ಶೇಟ್, ನಾರಾಯಣ ದೇವಡಿಗ, ಕೃಷ್ಣಾನಂದ ಶೇಟ್, ವಿನಾಯಕ ಚಿತ್ರಾಪುರ, ಶೀತಲಾ ಚಿತ್ರಾಪುರ, ಮುಖ್ಯಾಧ್ಯಾಪಕ ಪಿ.ಟಿ. ಚೌಹಾಣ, ರಾಮಚಂದ್ರ ಹೆಗಡೆ,ಸುಪ್ರಭ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!