ಕಾರವಾರ: ಶಿಕ್ಷಣ, ಸಮಾಜ ಸೇವೆ, ಹಿಂದುಳಿದ ವರ್ಗಗಳ ಮತ್ತು ಸದ್ಭಾವನೆ ಬೆಳೆಸುವ ಕಾರ್ಯಗಳಲ್ಲಿ ನೀಡಿರುವ ಅಮೂಲ್ಯ ಕೊಡುಗೆಯನ್ನು ಗುರುತಿಸಿ ಕಾರವಾರದ ಜಗದೀಶ ಗುರುನಾಥ ನಾಯ್ಕ ಅವರಿಗೆ ಸುವರ್ಣ ಚಾರಿಟೆಬಲ್ ಸಂಸ್ಥೆಯಿಂದ ನೀಡುವ ಮಹಾತ್ಮಾ ಗಾಂಧಿ ಸದ್ಭಾವನಾ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು.
ಇತ್ತೀಚಿಗೆ ಗೋವಾದ ಮೊರ್ಜಿಮ ನಲ್ಲಿರುವ ಖಾಸಗಿ ರೆಸಾರ್ಟನಲ್ಲಿ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸೇವೆ ಸಲ್ಲಿಸಿರುವ ಗಣ್ಯಮಾನ್ಯ ವ್ಯಕ್ತಿಗಳನ್ನು ಗೌರವಿಸುವ ಕಾರ್ಯಕ್ರಮದಲ್ಲಿ ಜಗದೀಶ ಗುರುನಾಥ ನಾಯ್ಕ ಅವರನ್ನು ಗೌರವಿಸಲಾಗಿದೆ. ಇವರು ಮಂಗಳೂರಿನ ಎಕ್ಸ್ಪರ್ಟ ಕಾಲೇಜಿನ ಉಪನ್ಯಾಸಕರಾಗಿ ಶಿಕ್ಷಣ, ಸಮಾಜ ಸೇವೆ, ಹಿಂದುಳಿದ ವರ್ಗಗಳ ಮತ್ತು ಸದ್ಭಾವನೆ ಬೆಳೆಸುವ ಕಾರ್ಯಗಳಲ್ಲಿ ಅಮೂಲ್ಯ ಕೊಡುಗೆಯನ್ನು ನೀಡುತ್ತಿದ್ದಾರೆ. ಕಾರ್ಯಕ್ರಮದಲ್ಲಿ ಸುವರ್ಣ ಚಾರಿಟಬಲ್ ಟ್ರಸ್ಟ್ ಹಾಗೂ ಕರ್ನಾಟಕ ಹಿಂದುಳಿದ ವರ್ಗಗಳ ಒಕ್ಕೂಟದ ರಾಜ್ಯಾಧ್ಯಕ್ಷ ಎಂ. ಶ್ರೀನಿವಾಸ ಬಾಬು, ಉಪಾಧ್ಯಕ್ಷ ನೀಲಕಂಠ, ಖ್ಯಾತ ಮುದ್ರಾ ಮತ್ತು ಮಂತ್ರ ತಜ್ಞ ಡಾ. ಲಕ್ಷ್ಮೀ ಶ್ರೀನಿವಾಸ ಗುರೂಜಿ, ಸಾಮಾಜಿಕ ಕಾರ್ಯಕರ್ತರಾದ ಸೋಮಶೇಖರ ಗುರೂಜಿ, ಸುವರ್ಣ ಸೂಪರ್ ಸ್ಟಾರ್ ಪವಿತ್ರ ನಾಯ್ಕ್ ಮತ್ತು ವಿವಿಧ ಸಂಸ್ಥೆಗಳ ಪ್ರತಿನಿಧಿಗಳು ಇದ್ದರು. ಕಾರ್ಯಕ್ರಮದ ಅಂತ್ಯದಲ್ಲಿ ಎಲ್ಲರಿಂದಲೂ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಆದರ್ಶ ತತ್ವಗಳನ್ನು ಅನುಸರಿಸುವ ಪ್ರತಿಜ್ಞೆ ಕೈಗೊಳ್ಳಲಾಯಿತು. ಬಳಿಕ ನಡೆದ ಜಾನಪದ ನೃತ್ಯ, ಗಾಯನ, ವಿವಿಧ ರೀತಿಯ ಸಾಂಸ್ಕ್ರತಿಕ ಕಾರ್ಯಕ್ರಮಗಳು ಸಮಾರಂಭಕ್ಕೆ ಇನ್ನಷ್ಟು ಮೆರಗನ್ನು ನೀಡಿತು.
ವರದಿ: ಉಲ್ಲಾಸ ಶಾನಭಾಗ ಶಿರಾಲಿ.