
ಕುಮಟಾ: ತಾಲೂಕಿನ ಕಾಗಾಲ ಗ್ರಾಮದ ಪ್ರಗತಿಪರ ಯುವ ರೈತ ಕಡ್ಲೆ ಮನೆ ನಾಗರಾಜ ಮೋಹನ ನಾಯ್ಕ ಇವರ ಹೊಲದಲ್ಲಿ ‘ಸ್ಕೊಡ್ವೇಸ್’ ಸಂಸ್ಥೆ ಆಯೋಜಿಸಿದ ಸಮುದಾಯ ಆಧಾರಿತ ‘ಸೀಡ್ ಬ್ಯಾಂಕ್'(Community Seed Bank) ಉದ್ಘಾಟನೆ, ವಿಶಿಷ್ಟ ತಳಿಗಳ ಕ್ಷೇತ್ರ ವೀಕ್ಷಣೆ ಮತ್ತು ಸಾಂಕೇತಿಕ ಪೈರು ಕಟಾವು ಕಾರ್ಯಕ್ರಮ ವನ್ನು ಖ್ಯಾತ ಪರಿಸರ ವಿಜ್ಞಾನಿ ಡಾ. ಸುಭಾಷ್ ಚಂದ್ರನ್ ಅವರು ಗಣ್ಯರೊಡಗೂಡಿ ನೆರವೇರಿಸಿದರು.

ಮುಖ್ಯ ಅತಿಥಿಯಾಗಿ ಪ್ರೊ. ನಾಗೇಶ ನಾಯ್ಕ ಕಾಗಾಲ ಪಾಲ್ಗೊಂಡು ಸ್ಥಳೀಯ ತಳಿಗಳಾದ ‘ಕಗ್ಗ’ ‘ಆರ್ಯನ್’, ‘ಹಳಗ’, ‘ಚಿಟಗ’ ಒಳಗೊಂಡಂತೆ 600ಕ್ಕೂ ಅಧಿಕ ವೈವಿಧ್ಯಮಯ ಭತ್ತದ ತಳಿಗಳನ್ನು ಸಂರಕ್ಷಿಸಿ ಅವುಗಳ ಬೀಜ ಸಂಗ್ರಹಣೆ ಮತ್ತು ಮುಂದಿನ ದಿನಗಳಲ್ಲಿ ಪ್ರದೇಶ ವಿಸ್ತರಣೆಗೆ ಪೂರಕವಾಗಿರುವಂತೆ ಸಮುದಾಯ ಬೀಜ ಸಂಗ್ರಹಣಾಲಯ ಹೊಂದುವಲ್ಲಿ ಮುಂದಾಗಿರುವ ನಾಗರಾಜ ನಾಯ್ಕರ ಶ್ರಮವನ್ನು ಪ್ರಶಂಶಿಸಿದರಲ್ಲದೆ ವಿಶೇಷ ಗುಣಧರ್ಮವುಳ್ಳ ತಳಿಗಳ ಸಕಾಲಿಕ ಕಟಾವು, ಸಂಗ್ರಹಣೆ, ಸೂಕ್ತ ಸಂಸ್ಕರಣೆ ಮತ್ತು ಆಕರ್ಷಕ ಪ್ಯಾಕಿಂಗ್ ಮೂಲಕ ಮೌಲ್ಯವನ್ನು ವೃದ್ಧಿಸಿ ಮಾರುಕಟ್ಟೆ ಬೇಡಿಕೆ ಹೆಚ್ಚುವಂತೆ ತಂತ್ರ ರೂಪಿಸಿ ಲಾಭದಾಯಕ ಉದ್ಯಮವಾಗಿ ಪರಿವರ್ತಿಸಿ ಕೊಳ್ಳಬೇಕು ಅವಲಂಬಿತ ರೈತರ ಆದಾಯ ಸಾಕಷ್ಟು ಹೆಚ್ಚಳವಾಗುವಂತೆ ನೋಡಿಕೊಳ್ಳಬೇಕೆಂದು ಅಭಿಪ್ರಾಯ ಪಟ್ಟರು.

